ರಾಮಾಯಣ, ಮಹಾಭಾರತ ಕಾವ್ಯಗಳು ಉಳಿದರೆ ನಮ್ಮ ಭಾರತ ದೇಶ ಉಳಿಯುವುದು : ಚಂದ್ರಶೇಖರ ಸುಳ್ಯಪದವು.
ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಿದ್ಯಾರ್ಥಿಗಳ ಕೈ ಬರಹದ ಭಿತ್ತಿ ಪತ್ರ ವಿವೇಕ ರಶ್ಮಿ ಬಿಡುಗಡೆ ಹಾಗೂ ಪಠ್ಯಾಧಾರಿತ ಗಮಕ ವಾಚನ ಕಾರ್ಯಕ್ರಮ ಸಿಂದೂರ ಸಭಾಂಗಣದಲ್ಲಿ ದಿನಾಂಕ 02/09/2025ನೇ ಮಂಗಳವಾರ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ವಿವೇಕಾನಂದ ಕನ್ನಡ ಮಾಧ್ಯಮ ಶಾಲಾ ಶಿಕ್ಷಕರಾದ ಶ್ರೀ ಚಂದ್ರಶೇಖರ್ ಸುಳ್ಯಪದವು ಅವರು ಪಠ್ಯ ದಲ್ಲಿರುವ ಹಳೆಗನ್ನಡ, ಕೀರ್ತನೆ, ದಾಸ ಸಾಹಿತ್ಯ, ಗಳಲ್ಲಿ ಇರುವ ಕಠಿಣ ಶಬ್ದಗಳ ಅರಿವು ಮೂಡಿಸಿದಾಗ ಮಗುವಿಗೆ ಸಾಹಿತ್ಯದ ಜ್ಞಾನ ಉಂಟಾಗುತ್ತದೆ. ರಾಮಾಯಣ, ಮಹಾಭಾರತ ಕಾವ್ಯಗಳು ಭಾರತದ ಸಂಸ್ಕಾರದ ಮೂಲವಾಗಿದೆ. ಅಂಕಗಳ ಜೊತೆಯಲ್ಲಿ ಕಲೆ, ಸಾಹಿತ್ಯಗಳನ್ನು ಮೈಗೂಡಿಸಿ ಕೊಂಡರೆ ಮಾತ್ರ ಜೀವನದಲ್ಲಿ ಯಶಸ್ವಿ ಯಾಗಲು ಸಾಧ್ಯ ಎಂದರು.
ವಿವೇಕ ರಶ್ಮಿ ಭಿತ್ತಿ ಪತ್ರ ಬಿಡುಗಡೆ ಮಾಡಿದ ಶಾಲಾ ಅಧ್ಯಕ್ಷರಾದ ಶ್ರೀ ಶಿವ ಪ್ರಕಾಶ್ ಎಂ ರವರು ಮಾತನಾಡಿ ವಿವೇಕ ರಶ್ಮಿ ಮಕ್ಕಳಲ್ಲಿ ಇರುವ ಸುಪ್ತವಾಗಿರುವ ಪ್ರತಿಭೆಯ ಬೆಳವಣಿಗೆಗೆ ದಾರಿದೀಪ ವಾಗಿದೆ. ಮಕ್ಕಳು ಸಾಹಿತ್ಯ ವನ್ನು ಅರಿತು ಕೊಂಡಾಗ ಮಾತ್ರ ಭಾವನೆಗಳಿಗೆ ಬೆಲೆ ಕೊಡಲು ಸಾಧ್ಯ ಎಂದರು. ಶಾಲಾ ಹಿರಿಯ ಶಿಕ್ಷಕಿ ಶ್ರೀಮತಿ ಪುಷ್ಪಲತಾ ಬಿ.ಕೆ ಯವರು ಅಧ್ಯಕ್ಷತೆಯನ್ನು ವಹಿಸಿದ್ದು, ಬದುಕಿನ ಸತ್ವ ವನ್ನು ಹುಡುಕುವುದೇ ಸಾಹಿತ್ಯ. ಮನಸ್ಸಿನ ಭಾವನೆಗೆ ಮೂರ್ತ ಸ್ವರೂಪ ನೀಡಿದಾಗ ಅದು ಸಾಹಿತ್ಯ ವಾಗುವುದು. ಮಾನವ ಮನಸ್ಸನ್ನು ಮೃದು ಗೊಳಿಸುವುದೇ ಸಾಹಿತ್ಯ. ಮಕ್ಕಳು ಓದುವ ಹವ್ಯಾಸವನ್ನು ರೂಢಿಸಿಕೊಳ್ಳಬೇಕಾದುದು ಬಹಳ ಅವಶ್ಯವಾಗಿದೆ ಎಂಬುದನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು.
ಕಾರ್ಯಕ್ರಮದಲ್ಲಿ ಹಿರಿಯ ಯಕ್ಷಗಾನ ಕಲಾವಿದರಾದ ಶ್ರೀ ಅಪ್ಪ ಕುಂಞ ಯಾದವ್, ಹವ್ಯಾಸಿ ಭಾಗವತರಾದ ಶ್ರೀ ಸುರೇಶ್ ಹೆಗ್ಡೆ, ಹಾರ್ಮೋನಿಯಂ ವಾದಕರಾದ ಶ್ರೀ ಲಿಂಗಪ್ಪ ಗೌಡ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಕುಮಾರಿ ಸಮೀಕ್ಷಾ ಕಾಮತ್ ವೈಯುಕ್ತಿಕ ಗೀತೆ ಹಾಡಿದರು, ಶಿಕ್ಷಕಿ ಶ್ರೀಮತಿ ಕವಿತಾ ಸ್ವರಚಿತ ಕವನ ವಾಚಿಸಿದರು, ಕುಮಾರಿ ಸಾನ್ವಿ.ಎಸ್ ಸಾಹಿತ್ಯದ ಕುರಿತು ಮಾತುಗಳನ್ನಾಡಿ, ಮುಖ್ಯ ಗುರುಗಳಾದ ಶ್ರೀ ಸತೀಶ್ ಕುಮಾರ್ ರೈ ಪ್ರಸ್ತಾವಿಕಾ ನುಡಿಗಳನ್ನಾಡಿ, ಕುಮಾರಿ ನಿರೀಕ್ಷಾ ಸ್ವಾಗತಿಸಿ, ವಿದ್ಯಾರ್ಥಿನಿಯರು ಪ್ರಾರ್ಥಿಸಿದರು.
ವಿದ್ಯಾರ್ಥಿ ಆಪ್ತ ರೈ ವಂದಿಸಿ, ಕುಮಾರಿಯರಾದ ಪೂರ್ವಿ ಬಿ.ಸಿ, ಹಾಗೂ ಸಾನ್ವಿ ಡಿ ಕಾರ್ಯಕ್ರಮ ನಿರೂಪಿಸಿದರು. ನಂತರ ಚಕ್ರಗ್ರಹಣ ಹಾಗೂ ಕೌರವೇಂದ್ರನ ಕೊಂದೆ ನೀನು ಎಂಬ ಪಠ್ಯಾಧಾರಿತ ಗಮಕ ವಾಚನ ನಡೆಯಿತು.