ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ‘ಸಪ್ತಶಕ್ತಿ ಸಂಗಮ’
ವಿದ್ಯಾಭಾರತಿ ಅಖಿಲ ಭಾರತ ಶಿಕ್ಷಣ ಸಂಸ್ಥಾನದ ಆಶ್ರಯದಲ್ಲಿ, ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ ,ತೆಂಕಿಲ ಪುತ್ತೂರು, ಇಲ್ಲಿ ಮೂರು ಮತ್ತು ನಾಲ್ಕನೇ ತರಗತಿಯ ಮಕ್ಕಳ ಮಾತೆಯರಿಗೆ 'ಸಪ್ತ ಶಕ್ತಿ ಸಂಗಮ' ಎಂಬ ಅವಿಸ್ಮರಣೀಯ ಕಾರ್ಯಕ್ರಮವು, ಡಿ. 23 ರಂದು ಪೂರ್ವಾಹ್ನ ನಡೆಯಿತು.
ಮಾತೆಯರನ್ನು ಅರಶಿನ,ಕುಂಕುಮ, ಬೆಲ್ಲ, ನೀರನ್ನು ಕೊಟ್ಟು ಕಾರ್ಯಕ್ರಮಕ್ಕೆ ಬರಮಾಡಿಕೊಳ್ಳಲಾಯಿತು. ಕಾರ್ಯಕ್ರಮಕ್ಕೆ ಆಗಮಿಸಿದ ಅತಿಥಿಗಳು ಭಾರತಮಾತೆಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಮುಖ್ಯ ಅತಿಥಿಯಾಗಿ ವೇದಿಕೆಯನ್ನು ಅಲಂಕರಿಸಿದ ಶ್ರೀಮತಿ ಸುಧಾ ಸೂರ್ಯನಾರಾಯಣ ಭಟ್ ಕಶೆಕೋಡಿ, ಇವರು ಮಹಿಳೆಯರಲ್ಲಿರುವ ಸಪ್ತಶಕ್ತಿಗಳನ್ನು ವಿವರಿಸುತ್ತ , ನಿತ್ಯ ಜೀವನದಲ್ಲಿ ಕುಟುಂಬ ನಿರ್ವಹಣೆಯಲ್ಲಿ ಹಾಗೆಯೇ ಸಮಾಜ ಸುಧಾರಣೆಯಲ್ಲಿ ಈ ಶಕ್ತಿಗಳನ್ನು ಹೇಗೆ ಬಳಸಿಕೊಳ್ಳಬೇಕೆಂದು ವಿವರಿಸಿದರು. 'ಶ್ರೀಮದ್ಭಗವದ್ಗೀತೆಯಲ್ಲಿ ಶ್ರೀ ಕೃಷ್ಣ ಹೇಳಿದ ಸ್ತ್ರೀಯರಲ್ಲಿರುವ ಸಪ್ತಶಕ್ತಿಗಳು ನಾನೇ, ಎಂಬ ಮಾತನ್ನು ಉಲ್ಲೇಖಿಸಿ ನಾವು ಆ ಶಕ್ತಿಗಳನ್ನು ಉಪಯೋಗಿಸಿಕೊಳ್ಳದಿದ್ದರೆ ಭಗವಂತನಿಗೆ ಅವಮಾನ ಮಾಡಿದಂತೆ' ಎಂದು ಹೇಳಿ ಮಾತೃ ಶಕ್ತಿಯು ಜಾಗೃತವಾಗಬೇಕೆಂದು ಕರೆ ನೀಡಿದರು.
ಶ್ರೀಮತಿ ಸವಿತಾ.ಎಂ. ರವರು 'ಸಪ್ತ ಶಕ್ತಿ ಸಂಗಮ' ಕಾರ್ಯಕ್ರಮದ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕಾರ್ಯಕ್ರಮದಲ್ಲಿ ದೇಶಭಕ್ತಿ ಗೀತೆಯನ್ನು ನೆರೆದಿದ್ದ ಮಾತೆಯರಿಗೆ ಹೇಳಿಕೊಡಲಾಯಿತು.
ನಂತರ ವೇದಿಕೆಯಲ್ಲಿ ಶ್ರೀಮತಿ ಪೂರ್ಣಿಮಾ ಜಗದೀಶ್ ಮಲ್ಲಿಗೆ ಕೃಷಿಕರು, ಅವರನ್ನು ಸನ್ಮಾನಿಸಲಾಯಿತು. ನಂತರ ಸನ್ಮಾನಿತರು ಮತ್ತು
ಕಾರ್ಯಕ್ರಮದಲ್ಲಿ ಭಾಗವಹಿಸಿದ ಮಾತೆಯರು ತಮ್ಮ ಅನುಭವಗಳನ್ನು ಹಂಚಿಕೊಂಡರು. ಹಾಗೆಯೇ ಕೆಲವು ಮಾತೆಯರು ಕೆಲವು ಗಂಟೆಗಳ ಸಮಯ ಶಾಲೆಯಲ್ಲಿದ್ದು, ಶಾಲೆಯಲ್ಲಿ ನಡೆದ ಮತ್ತೊಂದು ಕಾರ್ಯಕ್ರಮದಲ್ಲಿ ಭಾಗವಹಿಸಿರುವುದು ಈ ಕಾರ್ಯಕ್ರಮದ ಸಾರ್ಥಕತೆಗೆ ಸಾಕ್ಷಿಯಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಪ್ರಾಥಮಿಕ ವಿಭಾಗದ ಮುಖ್ಯಸ್ಥೆ, ಶ್ರೀಮತಿ ಸಂಧ್ಯಾರವರು 'ಮಹಿಳೆ ತನ್ನಲ್ಲಿರುವ ಶಕ್ತಿಯನ್ನರಿತು ತನ್ನ ಜವಾಬ್ದಾರಿಯನ್ನು ನಿರ್ವಹಿಸಿ ಎಲ್ಲರಿಗೂ ಪ್ರೇರಣೆಯಾಗಬೇಕೆಂದು ಹೇಳಿದರು. ಕೆ.ಜಿ ವಿಭಾಗದ ಮುಖ್ಯಸ್ಥೆ ಶ್ರೀಮತಿ ಮಮತಾ ರವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಶ್ರೀಮತಿ ಕೃಪಾ ರವರು ರಸಪ್ರಶ್ನೆ ಕಾರ್ಯಕ್ರಮವನ್ನು ನಡೆಸಿಕೊಟ್ಟರು.
ಈ ಕಾರ್ಯಕ್ರಮದಲ್ಲಿ ಸನ್ಮಾನಿತರ ಪರಿಚಯವನ್ನು ಶ್ರೀಮತಿ ಆಶಾ ಶೆಟ್ಟಿಯವರು, ಸಪ್ತಶಕ್ತಿ ಸಂಗಮದ ಸಂಕಲ್ಪವನ್ನು ಶ್ರೀಮತಿ ಅಕ್ಷತಾ ಆಚಾರ್ಯರವರು, ಶ್ರೀಮತಿ ವೀಣಾ ಕುಮಾರಿ ಮತ್ತು ಶ್ರೀಮತಿ ಸಂಗೀತಾ ರವರು ಪ್ರಾರ್ಥಿಸಿ, ಶ್ರೀಮತಿ ಆಶಾಲತಾ. ಕೆ ಸ್ವಾಗತಿಸಿ, ಶ್ರೀಮತಿ ಅಕ್ಷಿತಾ. ಕೆ ವಂದಿಸಿದರು. ಶ್ರೀಮತಿ ಸಹನಾ ಪೈ ರವರು ಈ ಕಾರ್ಯಕ್ರಮವನ್ನು ನಿರೂಪಿಸಿದರು.