ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಿಕ್ಷಕರಿಗಾಗಿ ಶೈಕ್ಷಣಿಕ ಪುನಶ್ಚೇತನಾ ಕಾರ್ಯಾಗಾರ - 2026-27
ಶೈಕ್ಷಣಿಕ ಬೆಳವಣಿಗೆಗೆ ಹೊಸ ಹೊಸ ವಿಚಾರಗಳು ಪೂರಕ. ತರಬೇತಿ ಪಡೆದವರು ಭವಿಷ್ಯದಲ್ಲಿ ತರಬೇತುದಾರರಾದಾಗ ಕಾರ್ಯಾಗಾರ ಯಶಸ್ವಿ ಎನಿಸುತ್ತದೆ. ನಮ್ಮಲ್ಲಿರುವ ಶಕ್ತಿ ಮಕ್ಕಳ ಬೆಳವಣಿಗೆಗೆ ಬಳಕೆಯಾಗಲಿ ಎಂದು ವಿವೇಕಾನಂದ ವಿದ್ಯಾವರ್ಧಕ ಸಂಘದ ಸಹಕಾರ್ಯ ನಿರ್ವಹಣಾಧಿಕಾರಿ ಶ್ರೀ ವೆಂಕಟರಮಣ ರಾವ್ ಮಂಕುಡೆ ಹೇಳಿದರು. ಅವರು ದಿನಾಂಕ 24-05-2026ನೇ ರವಿವಾರದಂದು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಿಕ್ಷಕರಿಗಾಗಿ 5ದಿನಗಳ ಕಾಲ ನಡೆಯಲಿರುವ ಶೈಕ್ಷಣಿಕ ಪುನಶ್ಚೇತನ ಕಾರ್ಯಾಗಾರವನ್ನು ದೀಪ ಬೆಳಗಿ ಉದ್ಘಾಟಿಸಿ ಮಾತನಾಡಿದರು.
ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ಆಡಳಿತ ಮಂಡಳಿ ಅಧ್ಯಕ್ಷರಾದ ಡಾ. ಶಿವಪ್ರಕಾಶ್ ಮಾತನಾಡುತ್ತಾ ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಯಲ್ಲಿ ಶಿಕ್ಷಕರ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ನಮ್ಮ ಜ್ಞಾನ ಮಕ್ಕಳಿಗೆ ಉಪಯೋಗವಾಗಲಿ. ಪರಿಣಾಮವಾಗಿ ನಿರಂತರವಾಗಿ ಉತ್ತಮ ಫಲಿತಾಂಶ ಬರುವಂತಾಗಲಿ ಎಂದರು. ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಸತೀಶ್ ಕುಮಾರ್ ರೈ ಪ್ರಾಸ್ತಾವಿಕ ಮಾತುಗಳನ್ನಾಡಿದರು.
ವೇದಿಕೆಯಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ಶ್ರೀಮತಿ ಪರಿಮಳಾ ಮೂರ್ತಿ, ನಿರ್ದೇಶಕರು, AHEAD, ಶಿಕ್ಷಕ ಸಂಸ್ಥೆ, ಬೆಂಗಳೂರು, ಶ್ರೀ ಬಸವಣ್ಣ, ಸಮಾಜಶಾಸ್ತ್ರಜ್ಞರು, ಡಾ ಎಂ ಎಸ್ ರಾಮಚಂದ್ರ , IIT ತರಬೇತುದಾರರು, ಕುಮಾರಿ ಅತೀರಾ ಉಪಸ್ಥಿತರಿದ್ದರು. ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ಆಡಳಿತ ಮಂಡಳಿ ಕೋಶಾಧಿಕಾರಿ ಶ್ರೀ ಕೃಷ್ಣ ಮೋಹನ್ ಸಂಪನ್ಮೂಲ ವ್ಯಕ್ತಿಗಳಿಗೆ ಸ್ಮರಣಿಕೆ ನೀಡಿ ಗೌರವಿಸಿದರು. ಶ್ರೀಮತಿ ಜ್ಯೋತಿಲಕ್ಷ್ಮಿ ಪ್ರಾರ್ಥಿಸಿದರು. ಶ್ರೀಮತಿ ಅಖಿಲಾ ಸ್ವಾಗತಿಸಿ, ಶ್ರೀಮತಿ ಆಶಾ ಶೆಟ್ಟಿ ವಂದಿಸಿದರು. ಶ್ರೀಮತಿ ಸಹನಾ ಪೈ ಕಾರ್ಯಕ್ರಮ ನಿರೂಪಿಸಿದರು.